
ಬಸ್ಸು ಬೆಂಗಳೂರಿಂದ ಹೋರಟಿದ್ದು ಲೇಟು. ಇಲ್ಲದಿದ್ದರೆ ಬೆಳಗ್ಗೆ 6:50ಕ್ಕೆ ಕಳಸ ತಲುಪಿರುತ್ತಿದ್ದೆ. ಅಲ್ಲಿಂದ ಬಸ್ರಿಕಟ್ಟೆಯ ನನ್ನ ಮನೆಗೆ 18ಕಿಮಿ. ಮೂರು ವರ್ಷಗಳಾದ ಮೇಲೆ ಹಬ್ಬಕ್ಕೆ ಮನೆಗೆ ಹೋರಟಿದ್ದು. ಸಹಜ ಕುತೂಹಲ ಜೊತೆಗೆ ರಾಶಿ ಪ್ರೀತಿ. ಕಳಸದಲ್ಲಿ ಇಳಿದಾಗಲೇ ಗೊತ್ತಾಗಿದ್ದು ಅದೇ ಬಸ್ಸಲ್ಲಿ ಹಳೇಯ ಖಾಯಂ ದೋಸ್ತ್ಗಳೂ ಇದ್ದರು ಅಂತ. ಕಳಸದಿಂದ ಮನೆ ಕಡೆ ಹೋಗೋ ಬಸ್ ಹತ್ತಿ ಕೊನೇಯ ಸೀಟಿನ ಮೂಲೆಯಲ್ಲಿ ಮುದುಡಿ ಕೂತೆ. ಸೀಳಿ ಬರುತ್ತಿತ್ತು ಛಳಿ ಗಾಳಿ. ಕಿವಿ ಬೆಚ್ಚಗಿರಲಿ ಅಂತಾ ಪ್ಲೇಯರ್ ಸಿಕ್ಕಿಸಿಕೊಂಡೆ. ಜೊತೆಗೆ ಇಷ್ಟದ ಹಾಡು. ಲೆಕ್ಕವಿಲ್ಲದಷ್ಟು ಸಲ ಓಡಾಡಿದ ಆ ದಾರಿಯಲ್ಲಿ ಕಳೆದುಹೋದ ನೆನಪುಗಳಿಗೆ ಲೆಕ್ಕವಿಲ್ಲ. ತಣ್ಣನೆಯ ಮುಂಜಾವಿನ ಸಿಹಿಗಾಳಿಯ ಜೊತೆಗೆ ಅವೂ ಹಿಂದೆಯೇ ಬರುತ್ತಿದ್ದವೋ ಏನೊ.

ಸುಮ್ಮನೆ ಕೂರೋ ರೀತಿನೇ ಗೊತ್ತಿಲ್ಲ ಅಪ್ಪನಿಗೆ. ಹಳ್ಳಿಯ ಪ್ರತಿ ಅಪ್ಪಂದಿರೂ ಹೀಗೆನೇ. ಕೆಲಸವೇ ಅವರಿಗೆ ಸಮಾನ ಹಾಗೂ ಸಮಾಧಾನ. ಗ್ಯಾರೇಜಿನ ಮೆಶೀನುಗಳ ಮಧ್ಯೆ ಗ್ರಿಸು ಮೆತ್ತಿದ ಕೈಗಳಿಂದ ಕನ್ನಡಕ ತೆಗೆದು ಕ್ಷೇಮ ವಿಚಾರಿಸಿದರು. ಬೆಚ್ಚಗೆ ಬ್ರೇಕ್ ಫಾಸ್ಟ್ ಮಾಡಿ ಊರು ಸುತ್ತೋಕೆ ಹೊರಟೆ.
ಬಸ್ರಿಕಟ್ಟೆ ಬದಲಾಗಿಲ್ಲ. ಬದಲಾಗೋದೂ ನಮಗೆ ಬೇಕಿಲ್ಲ. ಎರಡು ವರ್ಷಕ್ಕೊಮ್ಮೆ ಇಲ್ಲಿನ ರಸ್ತೆಗೆ ಡಾಂಬಾರು ಹಚ್ಚಿ ಹೋಗುತ್ತಾರೆ. ಕಾಲುದಾರಿಯಲ್ಲಿ ಬರಿಗಾಲಲ್ಲಿ ಮೈಲಿಗಟ್ಟಗೆ ನಡೆಯೋ ಇಲ್ಲಿಯವರಿಗೆ ಅದು ಕಾಡುವ ಸಮಸ್ಯೆಯೇನಲ್ಲ. ಸ್ವಚ್ಛ ಊರು. ಹಾಗೆಯೇ ಮನಸ್ಸಿರೋ ಜನ. ಹತ್ತಿರದ ಊರು ಕುಪ್ಪಳ್ಳಿ, ಪಕ್ಕಕ್ಕೆ ತಾಗಿ ಮಲಗಿರೋ ಕಾಫಿ ತೋಟ, ತಲೆ ಇತ್ತಿ ಮುಖ ಮಾಡಿರೋ ಕುದುರೆಮುಖ, ನೆರಳಾಗಿ ನಿಂತಿರೋ ಮೇರುತಿ ಬೆಟ್ಟ. ಅರೆಕ್ಷಣ ಅಲ್ಲಿ ನಿಂತಿದ್ದ ನಾನು ಬರೇ ಸೂಕ್ಷ್ಮ! ಬಹುಶಃ ಇದೇ ಇರಬೇಕು ಹಳ್ಳಿ ಪ್ರೀತಿ.
ಉಳಿದೆರಡೂ ದಿನ ಗಮ್ಮತ್ತು. ಹಬ್ಬ ಹಬ್ಬ ಹಬ್ಬ. ಆತ್ಮೀಯ ಗೋಪಾಲ್ ಹಾಗೂ ಗೆಳೆಯರೊಂದಿಗೆ ತಡರಾತ್ರಿಯ ಸುಗಮ ಸಂಗೀತ. ನೆನೆಸಿಕೊಂಡರೆ ನಗು. ಜಿಟಿ ಜಿಟಿ ಮಳೆಯೊಂದಿಗೆ ಸಂಭ್ರಮದ ಓಡಾಟ. ಇಷ್ಟಾದರೂ ಕೆಲಸದೂರು ಬೆಂಗಳೂರು ನೆನಪಾಗಲಿಲ್ಲ. ನೆನಪು ಮಾಡಿಕೊಳ್ಳಲೂ ಮನಸಾಗುತ್ತಿರಲಿಲ್ಲ.
ಮೂರನೇ ಕ್ಲಾಸಿನಲ್ಲಿರುವಾಗ ಶಂಕರ ಹೆಗಡೆ ಅಂಗಂಡಿಯಿಂದ ಮಸಾಲೆ ಕಡಲೆ ಕದ್ದಾಗ ಆದ ಅನುಮಾನವೇ ದೊಡ್ಡದೆಂದು ನಂಬಿದ್ದೆ. ಆದರೆ ಅದಕ್ಕಿಂದ ಮಿಗಿಲಾದ ಮೊಗೆದಷ್ಟು ಪ್ರೀತಿ ಈ ಊರಲ್ಲಿದೆ ಅನ್ನೋದು ಈಗ ಕಂಡುಕೊಂಡಿದ್ದೀನಿ. ಎಲ್ಲೋ ಓದಿದ್ದೆ. ‘ಬದುಕು ಪ್ರಿಯ ಅನಿಸೋದು ಅಲ್ಲಿಯ ಸುಂದರ ಕಟ್ಟಡಗಳಿಂದಲ್ಲ. ಸುತ್ತಲ ಜನರಿಂದ’. ಮತ್ತೆ ಮುಂಜಾವು. ನುಗ್ಗಿ ಬರುತ್ತಿತ್ತು ಮಳೆ. ವಾಪಾಸು ಹೊರಡಬೇಕು ರಾಜಧಾನಿಗೆ. ಆ ಜಡಿ ಮಳೆಯಲ್ಲೂ ಬೈಕ್ ಏರಿ ಬಸ್ಸು ಹತ್ತಿಸಿದ ಆತ್ಮೀಯ ಆನಂದ್.
ಬಿಟ್ಟು ಬಂದಿದ್ದೀನಿ. ಮೆತ್ತಗೆ ಕಾಡುವ ಮಾತನಾಡುವ ಊರನ್ನು ಮತ್ತೆ ಬರುತ್ತೀನಿ ಅನ್ನೋ ಮಾತು ಕೊಟ್ಟು. ಮುಂದಿನ ಬಾರಿ ನೀವೂ ಬನ್ನಿ. ನನ್ನೂರಿಗೆ...
